Shri Guru Charitre
ಸರಳ ಶ್ರೀ ಗುರುಚರಿತ್ರೆ
||ಶ್ರೀ ಗುರುಭೋ ನಮಃ ಹರಿ ಓಂ॥
||ತ್ರಿಮೂರ್ತಿ ರೂಪಿಣೇ ದತ್ತಾತ್ರೇಯಾಯ ನಮಃ||
ಭಗವಂತನು ತನ್ನನ್ನು ನಂಬಿದ ಭಕ್ತರನ್ನು ಕಾಪಾಡಲು ಹಲವಾರು ಅವತಾರಗಳನ್ನು ತಾಳಿದ್ದಾನೆ. ಪ್ರಸಿದ್ಧವಾದ ದಶಾವತಾರಗಳಷ್ಟೇ ಅಲ್ಲದೆ ವ್ಯಾಸ, ಕಪಿಲ, ದತ್ತಾತ್ರೇಯ ಮೊದಲಾದ ಜ್ಞಾನಪದ ರೂಪಗಳನ್ನು ಲೋಕ ಕಲ್ಯಾಣಕ್ಕಾಗಿ ತಾಳಿದ ಪರಮಾತ್ಮನು ಈ ಕಲಿಯುಗದಲ್ಲಿಯೂ ತನ್ನ ಮಹಿಮೆಗಳನ್ನು ತೋರಿಸಿದ್ದಾನೆ.
ಅತ್ರಿ ಋಷಿಗಳ ಪತ್ನಿ ಅನಸೂಯೆಯ ಪಾತಿವ್ರತ್ಯವನ್ನೂ ಮಣಿದು ಶಿಶು ರೂಪ ತಾಳಿದರು. ತ್ರಿಮೂರ್ತಿಗಳೂ ಒಂದೇ ರೂಪದಲ್ಲಿ ದತ್ತನಾಗಿ ಜ್ಞಾನ ಬೋಧೆಯನ್ನು ಮಾಡಿದರು.
ಶ್ರೀ ದತ್ತಾತ್ರೇಯನು ಮತ್ತೆ ಕಲಿಯುಗದಲ್ಲಿ ಎರಡು ಅವತಾರಗಳನ್ನು ತಾಳಿದನು. ಶ್ರೀಪಾದ ವಲ್ಲಭ ಹಾಗೂ ಶ್ರೀ ನೃಸಿಂಹ ಸರಸ್ವತೀಯತಿಗಳೇ ಆ ರೂಪಗಳಾಗಿವೆ.
ಈ ತ್ರಿಮೂರ್ತಿ ಸ್ವರೂಪಿಯಾದ ಶ್ರೀ ದತ್ತಾತ್ರೇಯನ ಮೂರು ಅವತಾರಗಳ ಮಹಿಮೆಯೇ ಪರಮ ಫಲಪ್ರದವಾದ ಪಾರಾಯಣ ಗ್ರಂಥವಾದ ಶ್ರೀಗುರುಚರಿತ್ರೆಯ ಕಥಾವಸ್ತುವಾಗಿದೆ. ಗುರುಚರಿತ್ರೆಯನ್ನು ಮೊದಲು ಹಳೆಗನ್ನಡ ಪದ್ಯಗಳಲ್ಲಿ ಸಾಖರೆ ವಂಶಜರಾದ ಸರಸ್ವತೀ ಗಂಗಾಧರರೆಂಬ ದತ್ತ ಭಕ್ತರು ರಚಿಸಿದರು. ಇದನ್ನು ಅನೇಕರು ಗದ್ಯ ರೂಪದಲ್ಲಿ ಪ್ರಕಟಿಸಿದ್ದಾರೆ.
ಶ್ರೀಗುರು ಚರಿತ್ರೆಯು ಅಧ್ಯಾಯಗಳ ಪಾರಾಯಣ ಗ್ರಂಥ. ಇದನ್ನು ಪ್ರತಿ ಗುರುವಾರ ಪಠಿಸಿದರೆ ಒಂದು ವರ್ಷದಲ್ಲಿ ನಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬುದು ಆಸ್ತಿಕರ ನುಡಿ. ಈ ಮಹಾನ್ ಗ್ರಂಥವನ್ನು ಸಾಮಾನ್ಯರಿಗಾಗಿ ಸಂಕ್ಷಿಪ್ತ ರೂಪದಲ್ಲಿ ಸಂಗ್ರಹಿಸಲಾಗಿದೆ.
ಪಾರಾಯಣ ಗ್ರಂಥಗಳಲ್ಲಿ ಶ್ರೀ ಗುರುಚರಿತ್ರೆಗೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶಗಳಲ್ಲಿ ದತ್ತ ಗುರುಗಳ ಭಕ್ತರು ಇದನ್ನು ಅವರವರ ಭಾಷೆಯಲ್ಲಿ ಶ್ರದ್ಧಾ ಭಕ್ತಿಗಳಿಂದ ಪಾರಾಯಣ ಮಾಡಿ ತಮ್ಮ ಮನೋಕಾಮನೆಗಳನ್ನು ಈಡೇರಿಸಿ ಕೊಳ್ಳುತ್ತಿದ್ದಾರೆ.
ವಿಶೇಷವೆಂದರೆ, ಮೊದಲು ಗುರುಚರಿತ್ರೆ ಬರೆಯಲ್ಪಟ್ಟಿದ್ದು ಕನ್ನಡ ಭಾಷೆಯಲ್ಲಿ ಎಂಬುದನ್ನು ಗಮನಿಸಬೇಕು. ನೂರಾರು ಪದ್ಯಗಳ ಈ ಬೃಹತ್ ಗ್ರಂಥದ ಸಾರವನ್ನು ನಂತರ ಸರಳ ಕನ್ನಡ ಗದ್ಯದಲ್ಲಿ ಈ ಶತಮಾನದ ಮೊದಲ ಭಾಗದಲ್ಲಿ ಬರೆಯಲಾಯಿತು.
Comments
Post a Comment