Sankshipta Guru Charitre in kannada



ಸರಸ್ವತಿ ಗಂಗಾಧರ ಗುರುಭಕ್ತನಿಗೊಲಿದು ಬಂದನಾ ಶ್ರೀದತ್ತ 
ಪರಿಪರಿತಾಪವ ಕೇಶವ ಕಳೆಯುತ ನಿಜಸುಖವಿತ್ತನು ಶ್ರೀದತ್ತ

ಕಷ್ಟದಿಂದ ಕಂಗೆಡುವ ಬಾಲಕನ ಕಂಡ ಸಿದ್ಧಮುನಿ ಶ್ರೀದತ್ತ 
ದುಷ್ಟ ಭಾವನೆಯ ಬಿಟ್ಟು ಭಜಿಸಿದರೆ ಕೊಟ್ಟು ಕಾಯುವನು ಶ್ರೀದತ್ತ

ನಿಂತು ನುಡಿವ ಯೋಗೀಂದ್ರನಂಘ್ರಯನು ಪಿಡಿದು ಕೇಳಿದ ಶ್ರೀದತ್ತ
ಇಂತು ಕರುಣೆಯದು ಕೊನೆಗೆ ಬಂದಿತೇ ಪಾಲಿಸು ಪಾಲಿಸು ಶ್ರೀದತ್ತ 

ಆಲಿಸು ಕುವರನೆ ಶ್ರೀಗುರುಚರಿತೆಯ ಭವತಾರಕನವ ಶ್ರೀದತ್ತ 
ತೇಲುವ ಎಲ್ಲವ ಹಸಿವನು ಹಿಂಗಿಸಿ ಹರುಷದಿ ಕಾಯುವ ಶ್ರೀದತ್ತ

ಇವನೇ ದತ್ತನು ಅನಸೂಯಾತ್ಮಜ ವಿಶ್ವನಿಯಾಮಕ ಶ್ರೀದತ್ತ  
ಭವತಿಯ ನೆವದಲಿ ವಿಪ್ರನ ಮಡದಿಗೆ ಸುತನಾದನು ತಾ ಶ್ರೀದತ್ತ

ಶ್ರೀಪಾದ ಶ್ರೀವಲ್ಲಭ ನಾಮದಿ ಕುಲ ಉದ್ಧರಿಸಿದ ಶ್ರೀದತ್ತ 
ಕಾಪಿಡೆ ನಡೆದನು ಭಾರತ ಜನವನು ಯಾತ್ರೆಯ ನೆವದಿಂ ಶ್ರೀದತ್ತ 

ತೀರ್ಥಕ್ಷೇತ್ರಗಳ ಸುತ್ತಿ ಪತಿತರನು ಪಾವನಗೊಳಿಸಿದ ಶ್ರೀದತ್ತ ಸಾರ್ಥಕವಾದ ಗೋಕರ್ಣವ ನೋಡುತ ಕುರವದಿ ನಿಂತನು ಶ್ರೀದತ್ತ

ಮಂದಮತಿ ಅಂಬಾಕುಮಾರನಿಗೆ ಜ್ಞಾನದಾತನು ಶ್ರೀದತ್ತ 
ಮಂದವಾಸರದ ಪ್ರದೋಷ ಪೂಜೆಯ ಮಹಿಮೆಯ ಹೇಳಿದ ಶ್ರೀದತ್ತ

ಅಗಸಗ ಮುಂದಣ ಜನುಮದಿ ರಾಜ್ಯದ ಭೋಗವನಿತ್ತನು ಶ್ರೀದತ್ತ ಅಗಲದಂತಿರಲು ವಲ್ಲಭೇಶನ ಸಂಕಟ ಕಳೆದನು ಶ್ರೀದತ್ತ

ವಚನದಂತೆ ಅಂಬಾ ಮಾಧವರಿಗೆ ಬಾಲಕನಾದನು ಶ್ರೀದತ್ತ ಉಚಿತಸಮಯ ಬರೆ ನಾಲ್ಕೂ ವೇದದ ಸಾರವ ಹೇಳಿದ ಶ್ರೀದತ್ತ

ಅವಳೀತನಯರ ತಾಯಿಗೆ ಕರುಣಿಸಿ ಕಾಶಿಗೆ ಬಂದನು ಶ್ರೀದತ್ತ ನವಸಂವತ್ಸರವಿರೆ ಸನ್ಯಾಸವ ಸ್ವೀಕರಿಸಿದನು ಶ್ರೀದತ್ತ

ಮೂವತ್ತಬುಧವ ದಾಟಿಬಂದು ತಾಯ್ತಂದೆಯ ನೋಡಿದ ಶ್ರೀದತ್ತ
ಆವುದನೆಲ್ಲವ ನೀಡಿ ಹರಸುತ ಪಯಣವ ಬೆಳೆಸಿದ ಶ್ರೀದತ್ತ

ಉದರಶೂಲೆಯ ವಿಪ್ರನ ಜನ್ಮವನುಳಿಸಿ ಕಾಯ್ದನು ಶ್ರೀದತ್ತ 
ಮುದದಿ ಪೂಜಿಸುವ ಸತಿಪತಿಯರನು ಕಂಡು ನಲಿದನು ಶ್ರೀದತ್ತ

ಸಾಯನದೇವನ ಸಾವನು ತಪ್ಪಿಸಿ ಯವನನಂಜಿಸಿದ ಶ್ರೀದತ್ತ 
ಧೈಯ ಸಾಧನೆಗೆ ಯಾತ್ರೆಯ ಮಾಡಲು ಶಿಷ್ಯನ ಕಳುಹಿದ ಶ್ರೀದತ್ತ

ಗುಪ್ತವಾಗಿರಲು ಗುರುನಿಂದಕನಿಗೆ ಬೋಧವ ಮಾಡಿದ ಶ್ರೀದತ್ತ 
ಸುಪ್ತ ಚೇತನೆಯ ಚಾಲಿಪ ಶಕ್ತಿಯು ಗುರುವಿಗಿದೆಂದನು ಶ್ರೀದತ್ತ

ದೇವಿಯ ಬಳಿಯಲಿ ನಾಲಿಗೆ ಕೊಯ್ದಗೆ ಮತಿಯ ಪಾಲಿಸಿದ ಶ್ರೀದತ್ತ 
ಭಾವದಿ ಭಿಕ್ಷೆಯ ನೀಡಿದ ವಿಪ್ರಗೆ ಸಂಚಿತ ತೋರಿದ ಶ್ರೀದತ್ತ

ಯೋಗಿನಿಯರ ಸಹವಾಸದಿ ಇರುವನು ನರಸಿಂಹ ಸರಸ್ವತಿ ಶ್ರೀದತ್ತ 
ಸಾಗಿ ಶೋಧಿಸಿದ ಅಂಬಿಗರವನಿಗೆ ಗುಪಿತವ ಹೇಳಿದ ಶ್ರೀದತ್ತ

ಹರಕೆಯ ಕುವರನ ಹರಣವ ಬರೆಸಿದ ಔದುಂಬರದಿ ಶ್ರೀದತ್ತ 
ಬರುತ ಅಮರಜಾ ಭೀಮಾ ಸಂಗಮ ಕ್ಷೇತ್ರದಿ ತಂಗಿದ ಶ್ರೀದತ್ತ

ಬರಡೆಮ್ಮೆಯನು ಕರೆಯಿಸಿ ಜನರಿಗೆ ಕೌತುಕ ತೋರಿದ ಶ್ರೀದತ್ತ 
ಹರುಷದಿ ಕರೆಯಲು ಗಾಣಗಾಪುರಕೆ ನೆಲೆಸಬಂದನಾ ಶ್ರೀದತ್ತ

ದೂರಮಾಡಿದ ಬ್ರಹ್ಮರಾಕ್ಷಸನ ಕುಮಸಿಗೆ ನಡೆದನು ಶ್ರೀದತ್ತ 
ತೋರಿದ ತ್ರಿವಿಕ್ರಮ ಭಾರತಿಗೆ ವಿಶ್ವರೂಪವನು ಶ್ರೀದತ್ತ

ವಾದಿಸಬಂದಿಹ ಸೊಕ್ಕಿದ ವಿಪ್ರರ ಗರ್ವವ ಕಳೆದನು ಶ್ರೀದತ್ತ 
ವೇದದಸಾರ ನಿರೂಪಣ ಮಾಡುತ ಅದ್ಭುತ ಹೇಳಿದ ಶ್ರೀದತ್ತ

ತಿಳಿಯದ ವಿಪ್ರರು ವಾದವ ಬೆಳೆಸಲು ಹೊಲೆಯನ ಕರೆದನು ಶ್ರೀದತ್ತ
ಬಳಿದು ಭಸ್ಮವ ಕೃಪೆಯನು ಮಾಡುತ ವಾದಿಸ ಹೇಳಿದ ಶ್ರೀದತ್ತ

ಪಾಪಿಗಳಾಗಲೇ ಅಂಜಿ ನಡುಗಿದರು ಶಾಪವ ಕೊಟ್ಟನು ಶ್ರೀದತ್ತ 
ಪಾಪ ಪುಣ್ಯದ ಸಂಚಿತ ಕರ್ಮದ ಫಲವನುಸುರಿದ ಶ್ರೀದತ್ತ

ಭಸ್ಮ ಮಹಾತ್ಮಯ ತಿಳಿಹೇಳಿದನು ವಾಮದೇವನು ಶ್ರೀದತ್ತ ವಿಸ್ಮಯಗೊಂಡಿಹ ರಾಕ್ಷಸ ಜನುಮಕೆ ಮೋಕ್ಷವನಿತ್ತನು ಶ್ರೀದತ್ತ

ಸತಿಸಾವಿತ್ರಿಯ ಪತಿ ಮೃತನಾಗಲು ಅಳುವುದ ಕಂಡನು ಶ್ರೀದತ್ತ
ಸತಿಧರ್ಮದ ಇತಿಹಾಸವ ಹೇಳುತ ಸತಿ ಹೋಗೆಂದನು ಶ್ರೀದತ್ತ

ಹೋಗುವ ಮುನ್ನ ಕ್ಷೇತ್ರಕ್ಕೆ ಬಂದ ಬಾಲೆಯ ಹರಸಿದ ಶ್ರೀದತ್ತ 
ಹೋಗದು ಜೀವ ಎನ್ನಯ ನುಡಿಯಿದು ಮಂಗಳವೆಂದನು ಶ್ರೀದತ್ತ

ಚೇತರಿಸಿತು ಶವ ಅಭಿಷಿತ ಜಲದಿಂ ಪ್ರೋಕ್ಷಣೆ ಮಾಡಲು ಶ್ರೀದತ್ತ ಆತುರದಿಂ ದಂಪತಿಗಳು ಬಾಗಲು ಆಶೀರ್ವದಿಸಿದ ಶ್ರೀದತ್ತ

ರುದ್ರಾಧ್ಯಾಯದ ರುದ್ರಾಕ್ಷಿಯ ಕಥೆ ಹೇಳಿದನವರಿಗೆ ಶ್ರೀದತ್ತ 
ಭದ್ರೆ ಸಿಮಂತಿನಿ ಮಾಡಿದ ಚಂದಿರವಾರದ ವ್ರತವನು ಶ್ರೀದತ್ತ

ಬೆಳಗಿನಿಂದಲಿ ರಾತ್ರಿಯವರೆಗಿನ ವಿಹಿತಕರ್ಮವನು ಶ್ರೀದತ್ತ ತಿಳಿಯಪಡಿಸಿದ ವಿಪ್ರನ ಮಡದಿಗೆ ಪರಾನ್ನದೋಷವ ಶ್ರೀದತ್ತ

ಮೂವರ ಭೋಜನ ಅಕ್ಷಯವಾಗಿಸಿ ದಾಸಗೊಲಿದನು ಶ್ರೀದತ್ತ 
ಸಾವ ಸಮೀಪದ ಗಂಗಾಮಾತೆಗೆ ಮಕ್ಕಳ ಕೊಟ್ಟನು ಶ್ರೀದತ್ತ

ಒಣಮರ ಚಿಗುರಿಸಿ ನರಹರಿ ವಿಪ್ರನ ಕುಷ್ಠವ ಕಳೆದನು ಶ್ರೀದತ್ತ 
ಅಣುಕದಿ ಅಂಜಿಕೆ ತೋರುತ ಶಿಷ್ಯನ ಪರೀಕ್ಷೆ ಮಾಡಿದ ಶ್ರೀದತ್ತ

ಕಾಶೀಕ್ಷೇತ್ರದ ಮಹಿಮೆಯ ತೋರಿದ ಸಾಯನದೇವಗೆ ಶ್ರೀದತ್ತ ತೋಷದೊಲವನು ಹಾಡುತಲೆಂದನು ಹರಿಹರ ಬ್ರಹ್ಮನು ಶ್ರೀದತ್ತ

ಅನಂತನಾವ್ರತ ಮಹಿಮೆಯ ಹೇಳುತ ವ್ರತ ಮಾಡಿಸಿದನು ಶ್ರೀದತ್ತ
ಅನಂತಕೋಟಿಯು ಅನಂತರೂಪನು ಅನಂತಮಹಿಮನು ಶ್ರೀದತ್ತ

ನೇಕಾರಗೆ ಶ್ರೀಶೈಲದ ಯಾತ್ರೆಯ ಮಾಡಿಸಿದನು ತಾ ಶ್ರೀದತ್ತ 
ಸಾಕಾರದಿ ಶಿವರಾತ್ರಿ ಮಹಾತ್ಮೆಯ ಹೇಳಿದನಾತಗೆ ಶ್ರೀದತ್ತ

ದೇವಿಯ ಭಕ್ತನ ಕುಷ್ಠ ನಿವಾರಿಸಿ ಜ್ಞಾನವಕೊಟ್ಟನು ಶ್ರೀದತ್ತ 
ಕವಿಯಾದಾ ಕಲ್ಮೇಶನರ್ಚಕನ  ಶಿಷ್ಯನ ಮಾಡಿದ ಶ್ರೀದತ್ತ

ಹಸುಳರೆಲ್ಲರನು ಮೆಚ್ಚಿಸಿ ಧರಿಸಿದ ಎಂಟು ರೂಪವನು ಶ್ರೀದತ್ತ 
ಕೃಷಿಕನ ಮೌನಾರ್ಚನೆಗೊಲಿದಿತ್ತನು ನೂರ್ಮಡಿ ಧಾನ್ಯವ ಶ್ರೀದತ್ತ

ಪುರಜನರಿಂ ಸಹ ಸಕಲ ತೀರ್ಥಗಳ ಯಾತ್ರೆಯ ಮಾಡಿದ ಶ್ರೀದತ್ತ ಪೂರ್ವಾಶ್ರಮದ ಭಗಿನಿಯ ಪಾಪಕ್ಷಾಲನೆ ಮಾಡಿದ ಶ್ರೀದತ್ತ

ಹರುಷದಿ ಹೇಳಿದ ಗುರುಗೀತೆಯನು ನಾಮಧಾರಕಗೆ ಶ್ರೀದತ್ತ
ನೆರೆ ನಂಬುವರನು ಪರಿಪಾಲಿಸುವುದು ನಿಶ್ಚಿತವೆಂದನು ಶ್ರೀದತ್ತ

ಯಾಕೋ ರಜಕಾ ಎನ್ನುತ ಯವನರ ರಾಜನ ಕರೆದನು ಶ್ರೀದತ್ತ ಕಾಕುಗೊಂಡಿಹ ರಾಜನ ಮಂಡಿಯ ರೋಗವ ಕಳೆದನು ಶ್ರೀದತ್ತ

ಯವನರ ಕಾಟಕೆ ಕದಳೀವನಕೆ ಹೋಗುವೆನೆಂದನು ಶ್ರೀದತ್ತ 
ಅವಸರದಿಂ ಬಲು ಶೋಕಿಸಬೇಡಿರಿ ಇಲ್ಲಿ ಹೆನೆಂದನು ಶ್ರೀದತ್ತ

ಹಾಡಿರಿ ಹಾಡಿರಿ ಮತ್ತು ಆರತಿ ಮಾಡಿರಿ ಎಂದನು ಶ್ರೀದತ್ತ
ಬೇಡಿದ ಕೊಡುವೆನು ಭಾವುಕ ಜನರಿಗೆ ಸತ್ಯವು ಎಂದನು ಶ್ರೀದತ್ತ

ಅತಿ ಸಂಕ್ಷೇಪದ ಈ ಗುರುಚರಿತೆಯ ದಿನವೂ ಹಾಡುವ ಕೇಳ್ವರಿಗೆ
ಅತಿ ಆನಂದವು ಮೇಣ್ ಸುಖಸಂಪದ ಪಾಲಿಸುವನು ತಾ ಶ್ರೀದತ್ತ

ಮಂದಮತಿ ನಾ ತೊದಲ್ನುಡಿಯಿಂದಲಿ ಹಾಡಿದೆನಿದನು ಶ್ರೀದತ್ತ ವಂದಿಸುತಲಿ ನಾ ಅರ್ಪಣ ಮಾಡುವೆ ನಿನ್ನಡಿಗಳಿಗೆ ಶ್ರೀದತ್ತ 

ಮಂಗಳ ಮಂಗಳ ನಿತ್ಯಸುಮಂಗಳ ಮಂಗಳಮಯ ಶ್ರೀದತ್ತ
ಗಂಗೆ ಮಾಳಾಂಬಿಕೆಕಾಂತಸ್ವರೂಪನು ಸಚ್ಚಿದಾನಂದಮಯ ಶ್ರೀದತ್ತ

ಸಿದ್ಧಾಂತ ಅವಧೂತ ಚಿಂತನ ಶ್ರೀ ಗುರುದೇವದತ್ತ || 
ಶ್ರೀಕೃಷ್ಣಾರ್ಪಣಮಸ್ತು


Comments

Popular posts from this blog

Hanumane Tandeyu Hanumane Thayiyu lyrics

Sri Rama Chandirane